ಸಿರಿಗೆರೆ: ನಿನ್ನೆ ರಾತ್ರಿ ಕೇಂದ್ರ ಸರ್ಕಾರ ಮದ್ಯ ಪಾನಕ್ಕೆ ಅನುಮತಿ ನೀಡಿರುವುದನ್ನು ತಿಳಿದು ನಿಜಕ್ಕೂ ನಮಗೆ ಆಘಾತವಾಗಿದೆ. ಜನರ ಆರೋಗ್ಯಕ್ಕಿಂತ ಆದಾಯವೇ ಮುಖ್ಯವೆಂದು ಭಾವಿಸುವ ನೇತಾರರಿಂದ ಖಂಡಿತ ದೇಶದ ಪ್ರಗತಿ ಸಾಧ್ಯವಿಲ್ಲ.

ಕೊರೊನಾ ಕಾರಣದಿಂದ ಮದ್ಯಪಾನ ನಿಷೇಧಿಸಿದ್ದರಿಂದ ಬಹುತೇಕ ಕುಡುಕರು ಆ ದುಶ್ಚಟದಿಂದ ದೂರವಾಗಲು ನಿರ್ಧರಿಸಿದ್ದರು. ಸರ್ಕಾರದ ತೀರ್ಮಾನ ನಿದ್ರೆ ಬಂದವರಿಗೆ ನಿದ್ರೆ ಮಾತ್ರೆ ಕೊಟ್ಟಂತಾಗುವುದು. ಕುಡಿದವರು ಸಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವೇ? ಇದು ಮತ್ತೇನೇನು ಅನಾಹುತಕ್ಕೆ ಕಾರಣವಾಗುವುದೋ? ಕುಡಿತದಿಂದ ಹಣ, ಆರೋಗ್ಯ, ನೆಮ್ಮದಿ ನೆಲಕಚ್ಚುವುದಲ್ಲದೆ ಕಳವು, ಸುಲಿಗೆ, ಅಪಘಾತ ಮತ್ತಿತರ ಅನಾಹುತಗಳು ಸಾಲು ಸಾಲಾಗಿ ನಡೆಯಬೇಕೆ? ಬಡವರಿಗೆ ಕುಡಿಸಿ ಆ ಹಣದಿಂದಲೇ ರಾಜ್ಯಭಾರ ಮಾಡಬೇಕೇ? ಕುಡಿತ ಬಿಟ್ಟಿರುವುದರಿಂದ ಆಗಿರುವ ಅನುಕೂಲತೆ, ಅನಾನುಕೂಲಗಳನ್ನು ಸರ್ವೆ ಮಾಡಿಸಿದ್ದರೆ ಖಂಡಿತ ಕೇಂದ್ರ ಸರ್ಕಾರ ಈ ನಿಲವನ್ನು ತೆಗೆದುಕೊಳ್ಳುತ್ತಿರಲಿಲ್ಲ.
ಸರ್ಕಾರದ ಈ ನಿಲವನ್ನು ನಾವು ಉಗ್ರವಾಗಿ ಸಾರ್ವಜನಿಕರ ಆರೋಗ್ಯ, ಆದಾಯ, ನೆಮ್ಮದಿಯ ಹಿನ್ನೆಲೆಯಲ್ಲಿ ಖಂಡಿಸುತ್ತೇವೆ. ಈ ವಿಚಾರದಲ್ಲಿ ಕರ್ನಾಟಕ ಸರ್ಕಾರಕ್ಕೆ ಇನ್ನೂ ಸ್ವಾತಂತ್ಯವಿದೆ. ಕೊರೊನಾ ಮಾರಿ ಮರೆಯಾಗುವವರೆಗಾದರೂ ಸಂಪೂರ್ಣ ಮದ್ಯ ನಿಷೇಧ ಮಾಡಿ ನಂತರ ಸರ್ವೆ ಮೂಲಕ ಮುಂದಿನ ಕ್ರಮ ಜರುಗಿಸಬೇಕೆಂದು ಕಳಕಳಿಯ ಮನವಿಯನ್ನು ಸರ್ಕಾರಕ್ಕೆ ಮಾಡಿಕೊಳ್ಳಬಯಸಿದ್ದೇವೆ.
ಕೇಂದ್ರ ಸರಕಾರದ ನಿಲುವನ್ನು ಜನಪರ ಕಾಳಜಿ ಇರುವ ರಾಜಕೀಯ ನೇತಾರರು, ಮಠಾಧೀಶರು, ವೈದ್ಯರು, ಮಾಧ್ಯಮದವರು, ಸಂಘಟನೆಗಳು ವಿರೋಧಿಸಿ ಸರಕಾರದ ಕಣ್ಣು ತೆರೆಸಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ. ಇಲ್ಲವಾದರೆ ಖಂಡಿತ ಕೊರೊನಾ ತಡೆಗಟ್ಟಲು ಇದುವರೆಗೂ ಮಾಡಿರುವ ಸಾಹಸ ಹೊಳೆಯಲ್ಲಿ ಹುಣಸೇಹಣ್ಣನ್ನು ಕದಡಿದಂತಾಗುವುದು. ತುಂಬಾ ನೊಂದ ಮನದಿಂದ ನಮ್ಮ ಭಾವನೆಗಳನ್ನು ಮಾಧ್ಯಮದ ಮೂಲಕ ಹಂಚಿಕೊಂಡಿದ್ದೇವೆ.
ಸಾರ್ವಜನಿಕ ರು ಸಹ ತಮ್ಮ ಪ್ರತಿಭಟನೆಯನ್ನು ವ್ಯಕ್ಯಪಡಿಸಿ ಕುಡಿತದಿಂದ ಕುಟುಂಬಗಳನ್ನು ರಕ್ಷಿಸುವ ಸಂಕಲ್ಪ ಸ್ವೀಕರಿಸಿಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ.
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು,
ಸಿರಿಗೆರೆ.